Saturday, September 12, 2015

ಕವಿತೆ: ನಾ ಕಂಡ ಬೆಳಗು!


ಶ್ರೀ
ನಾ ಕಂಡ ಬೆಳಗು!
 
ಬೆಳಾಗಾಯಿತು ಎದ್ದೇಳು ಎಂದೆಬ್ಬಿಸಿದಳು ಅಮ್ಮ
ಎದ್ದು ನೋಡಿದೆ ಅದು ಆರರ ಸಮಯ

ಹೊರಬಂದು ನೋಡಿದರೆ ಎಲ್ಲೆಲ್ಲೂ ಹಸಿರು
ಮಳೆಯ ಆಗಮನದಿಂದ ಧರೆಯೆಲ್ಲ ಕೆಸರು

ಮನೆಯ ಮೇಲಿಂದ ಕಂಡಿತು ಸಹ್ಯಾದ್ರಿಯ ಸರಣಿ
ನಡುವೆ ಮೂಡುತಿರುವ ಹೊಂಬಣ್ಣದ ತರಣಿ

ಎಲೆಯ ಮೇಲ್ಗಡೆ ಬಿದ್ದ ಮಳೆಹನಿಯ ಮುತ್ತು
ಎಂಥವರ ಮನವನ್ನೂ ಸೂರೆಗೊಳ್ಳುವಂತಿತ್ತು

ಆಹಾ! ಅದೆಂಥಹ ರಮಣೀಯ ನೋಟ
ಗಿರಿಯ ಸುತ್ತಲು ಇರುವ ತೆಂಗು-ಕಂಗಿನ ತೋಟ

ಮುಗಿಲೆತ್ತರಕೆ ಬೆಳೆದು ನಿಂತಿವೆ ಕಾಡಿನ ಕಲ್ಪವೃಕ್ಷಗಳು!
ಇದನಪ್ಪುವಂತೆ ಕಾಣುತಿವೆ ಬಾಂದಳದ ಮೇಘಗಳು!

ಹಾಡುತಿರೆ ಮಧುರಂದದಿ ಪಕ್ಷಿಗಳ ಸಮುದಾಯ
ಜುಮ್ಮೆಂದಿದೆ ಇದನಾಲಿಸಿ ಎನ್ನಯ ಈ ಹೃದಯ!

ಭೋರ್ಗರೆದು ಸಾಗುತಿಹಳು ದೂರದಿ ನದಿ ತುಂಗೆ
ತನ್ನ ಮಡಿಲ ಹೊನ್ನಾಗಿಸಿ ಕರುನಾಡಿನ ಗಂಗೆ!

ಎಷ್ಟು ಸುಂದರವಾಗಿದೆ ನಮ್ಮೆಲ್ಲರ ತಾಯ್ನಾಡು
ಭಾರತಾಂಬೆಯ ಮಡಿಲ ಸಿರಿಗನ್ನಡ ನಾಡು!

ಈ ಸೊಬಗ ಕಂಡೆನ್ನ ಮನಸಿಗೇನೋ ಹರುಷ!
ಮೂಡುತಿರಲಿ ಬಾಳಿನಲ್ಲಿ ಇಂಥಹ ರಸನಿಮಿಷ!
 
ರಚನೆ - ಸ.ಗು.ಸಂತೋಷ್
ವರ್ಷ - ೧೯೯೫
ಪ್ರೇರಣೆ: ಇದು ನನ್ನ ಮೊದಲ ಕವಿತೆ. ನನ್ನ ಊರು ಮಲೆನಾಡಿನಲ್ಲಿದೆ ಅಲ್ಲಿನ ಸೊಬಗು ಸದಾ ನನ್ನನ್ನು ಕಾಡಿದೆ. ಕಾಡುತ್ತಲೇ ಇದೆ.

2 comments:

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...