Dedicating this to all my beloved one's on this special birthday occasion of MG and KR ☺️
ಮೌನಗಡಲು!
ಕಡಲ ತೀರದಿ ಕುಳಿತು ಮೌನ ಮಾತಾಗುವ ಅಮಿತ ಸುಂದರ ನೆನಪು!
ಒಮ್ಮೆ, ಮತ್ತೊಮ್ಮೆ, ಇನ್ನೊಮ್ಮೆ ಬೇಕೆನಿಸದೆ ಇರದು ಅದರ ಸೊಗಸು
ಪಡಲು ತರಣಿಯು ತಂಪು ಸುರಿದು
ಜಾರುತ ಸುಡುವ ಬಿಸಿಲಿನ ಹಿಡಿತ!
ಒಡಲು ಬೆವರಲಿ ಮಿಂದು ಮಣಿಯೆ!
ಏಳುವ ಮನಸು ಹಗುರವು ಖಚಿತ!
ಅಲೆಯ ಮೊರೆತಕೆ ಕಿವಿಯ ತೆರೆದು,
ದೂಡುತ ಎಲ್ಲ ಬೇಡದ ಕೊರೆತ!
ತಿಮಿರ ತಿವಿತಕೆ ತೆರೆಯನೆಳೆಯೆ
ಮೂಡುವ ಶಾಂತಿ ನೆಮ್ಮದಿ ಮಿಡಿತ!
ಸಲಿಲದಲೆತೆರೆ ನಾದ ಬೆಳೆದು
ನೀಡುತ ಭಾವ ಗಂಗೆಗೆ ಸರಿತ
ನೆನಪಿನಂಗಳ ಬೆಳಗಿ ಹೊಳೆಯೆ
ತೋರುವ ಭಾಗ್ಯನಗರದ ಚರಿತ!
ಮಧುರ ಸ್ನೇಹದ ಪರ್ವ ತೆರೆದು
ಕಾಣುತ ದಿವ್ಯ ಕಾವ್ಯದ ಸವಿತ!
ಒಲುಮೆ, ಕಾಂತಿಯ ವರ್ಷಗರೆಯೆ
ಹೀರುವ ಜೇನು ಸವಿಯದಮೃತ!
ರಚನೆ: "ಸಂತ" (ಸ.ಗು ಸಂತೋಣ್)
ತಾರೀಖು: ೧೦/೦೬/೨೦೨೨
ಪ್ರೇರಣೆ:
ನನ್ನ ಸೋದರಿ ಶ್ರೀವಿದ್ಯಾ ಕಳುಹಿಸಿದ ಕಡಲ ತೀರದಲ್ಲಿನ ಸುಂದರ ಭಾವಚಿತ್ರಗಳು... ಕಡಲು ಎಂದೊಡನೆ ಅದರ ಅಗಾಧ ವಿಸ್ತಾರ, ಹಾಗೂ ಅದರ ತೀರದಲ್ಲಿನ ಅನಂತ ಶಾಂತತೆ ಎರಡೂ ಒಮ್ಮೆಗೆ ಕಣ್ಮುಂದೆ ಬರುತ್ತದೆ.
ಶಿವರಾಮ ಕಾರಂತರ "ಮರಳಿ ಮಣ್ಣಿಗೆ" ಮೊದಲ್ಗೊಂಡು ಅನೇಕ ಕಾದಂಬರಿಗಳು ನನ್ನನ್ನು ಕಾಡುತ್ತವೆ. ಕನ್ಯಾಕುಮಾರಿ, ಮರವಂತೆ, ಸೋಮೇಶ್ವರ, ಮಲ್ಪೆ, ಗೋಕರ್ಣ ತೀರಗಳಲ್ಲಿ ನಾನು ಕಳೆದ ಕೆಲವು ಸುಂದರ ಕ್ಷಣಗಳು ನೆನಪಾಗುತ್ತವೆ...
ಆ ಪ್ರಶಾಂತ ವಾತಾವರಣದಲ್ಲಿ ನೆನಪಿಗೆ ಬರುವುದು ನನ್ನ ಬಾಳಿನ ನೆಚ್ಚಿನ ಕ್ಷಣಗಳು... ನನ್ನ ಆತ್ಮೀಯರು...
ಹೈದರಾಬಾದಿನ ದಿನಗಳು ಸದಾ ಅಲ್ಲಿ ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತವೆ... ಅದರ ಭಾವಾಭಿವ್ಯಕ್ತಿಯೆ ಈ ಕವನ... 😊
ಇಂದು ನನ್ನ ನೆಚ್ಚಿನ ಗೆಳೆಯರಾದ ನಾಗರಾಜ ಮತ್ತು ರಾಘವೇಂದ್ರರ ಜನ್ಮ ದಿನವೂ ಹೌದು
No comments:
Post a Comment