Saturday, December 14, 2019

ಕವಿತೆ: ತನ್ಮಯ

"ತನ್ಮಯ"

ದೇವ ಲೋಕದಿಂದ ಬಂದ ದಿವ್ಯ ಮೂರ್ತಿಯೆ
ನಮ್ಮ ಬಾಳ ಅಂಗಳದ ಪಾರಿಜಾತವೆ

ಸೃಷ್ಟಿ ಸೊಗಸ ಮಡಿಲಲ್ಲಿ, ದೃಷ್ಟಿ ಆಗೊ ಚೆಲುವಲ್ಲಿ
ನವ್ಯ ನಲವು ಗೆಲವಲ್ಲಿ, ವಿಮಲ ಮನದ ಒಲವಲ್ಲಿ 
ನಿತ್ಯ ಚೈತ್ರ ಚಿತ್ತಾರ, ಬುವಿಗೆ ನಾಕವೆ!
ನಿನ್ನಿಂದ ಎಲ್ಲವೂ ಮಾಯಾಲೋಕವೆ!!

ಮಿನುಗೊ ತಾರೆ ಮೆರುಗಿಗೆ, ಸುರಿವ ಸೋನೆ ಸೊಬಗಿಗೆ!
ಬೀಸೊ ಗಾಳಿ ತಂಪಿಗೆ, ಹಕ್ಕಿ ಗಾನ ಇಂಪಿಗೆ  
ಹೋಲಿಕೆ, ಸಾಟಿ ಇನ್ನಿಲ್ಲ, ನೀನೊಬ್ಬಳೆ ಹೊರತಲ್ಲ!!
ಸೃಷ್ಟಿಯೆ ವಿಸ್ಮಯ! ನಿನ್ನೊಳೆಲ್ಲ ತನ್ಮಯ!

ಭಕ್ತಿ ಭಾವ ಹೊನಲಿಗೆ, ತಾಯಿ ಶಾಂತಿ ಮಡಿಲಿಗೆ
ಧ್ಯಾನ ಜ್ಯೋತಿ ಬೆಳಕಿಗೆ, ಮುಕ್ತಿ ಮಾರ್ಗ ಚರಿತೆಗೆ
ಸರಿಸಮ ರೂಪ ಇನ್ನಿಲ್ಲ, ನಿನ್ನದೊಂದೆ ಹೊರತಲ್ಲ
ಸೃಷ್ಟಿಯೆ ವಿಸ್ಮಯ! ನಿನ್ನೊಳೆಲ್ಲ ತನ್ಮಯ!

ಬದುಕು, ಬೆದಕು ಕನಸಿಗೆ; ಬಸಿರು, ಹಸಿವು ದಣಿವಿಗೆ
ಬಾನು, ಭೂಮಿ, ಕಡಲಿಗೆ; ತಾಯಿ ತಂದೆ ಮಡಿಲಿಗೆ
ಅಮೃತ ಧಾರೆ ಬೇರಿಲ್ಲ! ನೀನು ಮಾತ್ರವೆ, ಹೊರತಲ್ಲ! 
ಸೃಷ್ಟಿಯೆ ವಿಸ್ಮಯ! ನಿನ್ನೊಳೆಲ್ಲ ತನ್ಮಯ!


ರಚನೆ - "ಸಂತ" (ಸ.ಗು ಸಂತೋಷ)
ತಾರೀಖು - 30/10/16

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...