"ಹೋಹೆನ್ಜ಼ೋಲೆರ್ನ್"
ವಸುಂಧರೆಗೆ ತೊಡಿಸಿರಲು ತುಹಿನಾಂಬರದ ಸಿಂಗಾರ
ಕಂಗೊಳಿಸಿದೆ ನಡುವಿನಲಿ ಭವ್ಯ ಭವನದ ಚಿತ್ತಾರ
ಪ್ರಕೃತಿಯ ವಿಸ್ಮಯದ ಆವರಣವ ಸೆರೆಹಿಡದು
ಮೂಡಿಸಿಹ ಅಚ್ಚರಿಯ ಅಚ್ಚುಕಟ್ಟಿನ ಈ ಅಚ್ಚು
ನೋಡಿದೊಡನೆಯೆ ಬೆರಗು! ಮರುಕ್ಷಣವೆ ಅಚ್ಚುಮೆಚ್ಚು!
ಹೊತ್ತುರಳಿಯೂ ಬಿಡದು, ನೋಡಬೇಕೆನುವ ಹುಚ್ಚು!!
ಎಲ್ಲರೊಳು ಕವಿ ಉದಯ, ಎಲ್ಲರಿಗಿದು ಕವಿಸಮಯ
ಕಲ್ಪನೆಯ ಕಣ್ತೆರೆಯೆ, ಮುಂದೆ ಆ ದಿವ್ಯಲೋಕ
ಪಾಲ್ಗಡಲ ಮೇಲಿರುವ ಶ್ರೀಹರಿಯ ವೈಕುಂಠ!
ಹಿಮಮಲೆಯ ನಡುವಿರುವ ಗೌರೀಶ ಕೈಲಾಸ!
ಎಲ್ಲೆಡೆಯು ಮಂಜುಮಣಿ,ಅಲ್ಲಲ್ಲಿ ಹಿಮಪಾತ
ತನುಮನವನಾವರಿಸಿ ಧವಳಗಿರಿ, ವಿಮಲಸಿರಿ
ನಿರ್ಮಲತೆ ಮಡುಗಟ್ಟಿ, ತೋರುತ ನಿತ್ಯತೆಯ ಅವತಾರ
ನಿಸ್ಪೃಹತೆ ಮೈಗೂಡಿ, ದಿಕ್ತಟ ಗುಂಜಿಸಿದೆ ಓಂಕಾರ!
ರಚನೆ: "ಸಂತ" (ಸ.ಗು ಸಂತೋಷ್ಟ)
ತಾರೀಖು: ೧೬/೧೧/೨೦೨೪
ಪ್ರೇರಣೆ: ನನ್ನ ಆತ್ಮೀಯ ಗುರು (ಗುರುದತ್) ಅದ್ಭುತವಾಗಿ ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದು, ಹಂಚಿಕೊಂಡ ಛಾಯಾಚಿತ್ರದಲ್ಲಿನ ನಿಸರ್ಗ ಸೌಂದರ್ಯ!ಅ

No comments:
Post a Comment